My New Blog
I have moved my blog to http://www.nannakhajane.com/Blog
Thanks
ಅಮೃತ ಲಹರಿ
ಹಾಡು ಕೇಳಿ.
ಚಿತ್ರ: ಮನೆಯೇ ಮಂತ್ರಾಲಯ(1986)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯನ: ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್
Happy Birthday To You
Happy Birthday To You
Dance Dance Baby Dance
Dance Dance Baby Dance
ಅಂದು ನಿನ್ನ ನೋಡಲು ಕಣ್ಣೆ ಮಾತನಾಡಲು
ಕನಸಿನಲೀ ಮನಸಿನಲೀ ಪ್ರೇಮಗೀತೆ ಹಾಡಿದೇ
ಹ್ಯಾಪಿ ಬರ್ತ್ ಡೇಟೂ ಯೂ
ಐ ಲವ್ ಯೂ..
ಅಂದು ನಿನ್ನ ನೋಡಲು ಕಣ್ಣೆ ಮಾತನಾಡಲು
ಕನಸಿನಲೀ ಮನಸಿನಲೀ ಪ್ರೇಮಗೀತೆ ಹಾಡಿದೇ
ಹ್ಯಾಪಿ ಬರ್ತ್ ಡೇಟೂ ಯೂ
ಐ ಲವ್ ಯೂ...
Dance Dance Baby Dance
Dance Dance Baby Dance
ಕೆಂಪಾದ ನಿನ್ನಾ ಈ ಕೆನ್ನೆ ನೋಡೀ
ನನ್ನಲ್ಲಿ ಒಂದಾಸೆ ಈಗ
ಸಂಕೋಚ ಬಿಟ್ಟು ನನ್ನನ್ನು ಸೇರೆ
ವಯ್ಯಾರಿ ನೀಬಾರೆ ಬೇಗ..
ಮೊಗ್ಗೊಂದು ಹಿಗ್ಗಿ ಹೂವಾದ ಹಾಗೇ
ನಿನ್ನನ್ನು ನಾ ಸೇರಿದಾಗ
ಎಂದೆಂದು ನಿನ್ನಾ ಬಿಡಲಾರೆನೆಂಬ
ಛಲವೊಂದು ನನ್ನಲ್ಲಿ ಆಗ
ಬಾ ಮಾತಿನ್ನು ಸಾಕೂ ಆ ಮುತ್ತೊಂದು ಬೇಕೂ....ಅಂದು ನಿನ್ನ ನೋಡಲೂ...
Dance Dance Baby Dance
Dance Dance Baby Dance
ಈ ಕಣ್ಣ ಮಿಂಚ ಮೈಯ್ಯಲ್ಲ ತುಂಬೀ
ನನ್ನನ್ನು ನೀ ಕಾಡಬೇಡ
ಝುಮ್ಮೆನ್ನುವಂತೇ ತೋಳಿಂದ ನನ್ನ
ಓ ನಲ್ಲ ನೀ ಒತ್ತಬೇಡ
ತಂಗಾಳಿಯಲ್ಲೀ ಉಯ್ಯಾಲೆಯಂತೆ
ಮನಸಿಂದು ಓಲಾಡುವಾಗ
ಓ ಮುದ್ದು ನಲ್ಲೆ ಈ ಲೋಕದಲ್ಲೀ
ನಿನ್ನಿಂದ ನಾ ಕಂಡೆ
ಈ ಬಾಳೆಲ್ಲ ಹೀಗೇ ನೀ ಸಂತೋಷ ನೀಡು....ಅಂದು ನಿನ್ನ ನೋಡಲು....
ರಚನೆ: ಕೆ.ಎಸ್.ನರಸಿಂಹಸ್ವಾಮಿ
ನಿಜಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು...
ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು...
ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು...
ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಿ ಎರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ...
(ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ 'ಇರುವಂತಿಕೆ' ಕವನ ಸಂಕಲನದಿಂದ)
ನಾನು ಚಿಕ್ಕವಳಾಗಿದ್ದಾಗಿನಿಂದ ಕಂಡ ಸಿನೆಮಾ ಹೀರೋ ಅಂದರೆ ಅದು ಕನ್ನಡದ ರಾಜ್ ಕುಮಾರ್ ಒಬ್ಬರೇ. ಅವರ ಸಿನೆಮಾಗಳಿಗೆ ಮಾತ್ರ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದುದು. ಆಗ ಈಗಿನಂತೆ ಕನ್ನಡ ಚಿತ್ರಗಳು ಏಕಕಾಲಕ್ಕೆ ಎಲ್ಲಾ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿರಲಿಲ್ಲ. ಬೆಂಗಳೂರು, ಹುಬ್ಬಳ್ಳಿ ಅಂತಹ ದೊಡ್ಡ ದೊಡ್ಡ ಊರಲ್ಲಿ ಮಾತ್ರ ಹೊಸ ಚಿತ್ರಗಳು ಬಿಡುಗಡೆಯಾಗುತ್ತಿತ್ತು. ನಮ್ಮ ಊರಲ್ಲಿ ಬರುವ ಹೊತ್ತಿಗೆ ಅದು ಬೇರೆ ಊರಿನವರಿಗೆ ಹಳತಾಗಿರುತ್ತಿತ್ತು. ನನಗಿನ್ನೂ ನೆನಪಿದೆ ರಾಜ್ ಚಿತ್ರಗಳು ಬಿಡುಗಡೆಗೆ ಮುನ್ನವೇ ಊರಿನಲ್ಲಿರುವ ಸ್ಕೂಲು, ಹೋಟೇಲ್ ಮತ್ತು ಮೂರುರಸ್ತೆ ಸೇರುವ ಕಡೆ ರಾಜ್ ಚಿತ್ರದ ದೊಡ್ಡ ದೊಡ್ಡ ಬ್ಯಾನರ್ ಗಳು ಎಲ್ಲೆಲ್ಲೂ ರಾರಾಜಿಸಿರುತ್ತಿತ್ತು. ಊರ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಉತ್ಸಾಹಿತರಾಗಿರುತ್ತಿದ್ದರು. ಊರಲ್ಲಿ ಒಂದು ಥರ ಹಬ್ಬದ ವಾತಾವರಣ ಇರುತ್ತಿತ್ತು.
ಚಿತ್ರ ಬಿಡುಗಡೆಗೆ ಮುನ್ನವೇ ಶುರು ನಮ್ಮ ಮನೆಯಲ್ಲಿ ನನ್ನ ಮತ್ತು ನನ್ನ ತಮ್ಮನ ರಾಗ, ನಮ್ಮ ತಂದೆಗೆ ವರಾತ ಹಚ್ಚುತ್ತಿದ್ದೆವು. 'ಅಣ್ಣ ರಾಜ್ ಕುಮಾರ್ ಸಿನಮಾ ಬರ್ತಿದೆ ನಮ್ಮನ್ನ ಯಾವಾಗ ಕರ್ಕೊಂಡು ಹೋಗ್ತೀಯಾ' ಅಂತ. ನಮ್ಮ ತಂದೆ ಮನಸ್ಸು ಮಾಡಿದ್ರೆ ಮೊದಲನೇ ಶೋಗೇ ಕರೆದುಕೊಂಡು ಹೋಗಬಹುದಿತ್ತು ಯಾಕೇಂದ್ರೆ ಆ ಥಿಯೇಟರ್ ಮಾನೇಜರ್ ನಮ್ಮ ತಂದೆಗೆ ಒಳ್ಳೆಯ ಸ್ನೇಹಿತರು, ಆದರೆ ಅಣ್ಣ ಅದಕ್ಕೆ ಒಪ್ಪುತ್ತಲೇ ಇರಲಿಲ್ಲ. ನನ್ನ ಕೆಲವು ಸ್ನೇಹಿತರು ಮೊದಲ ಆಟಕ್ಕೆ ಹೋಗುತ್ತಿದ್ದರು, ಅಲ್ಲಿಂದ ಶುರು ಸ್ಕೂಲ್ ಗೆ ಹೋಗೋವಾಗ ಬರೋವಾಗೆಲ್ಲಾ ಆ ಚಿತ್ರದ ಕಥೆ ಹೇಳೋಕ್ಕೆ ಶುರು. ನಾನು ಬೇಡ್ರೆ ನಂಗೆ ಈಗ್ಲೇ ಕಥೆ ಹೇಳ್ಬೇಡಿ ಆಮೇಲೆ ನಂಗೆ ಸಿನೆಮಾ ನೋಡೋದ್ರಲ್ಲಿ ಏನೂ ಮಜಾ ಇರಲ್ಲ ಅಂತ ಬಡ್ಕೊಂಡ್ರು 'ಒಂದ್ಸಲ ರಾಜ್ ಕುಮಾರ್ ಏನು ಮಾಡ್ತಾನೆ ಗೊತ್ತಾ' ಅಂತ ಅಲ್ಲೊಂಚೂರು ಇಲ್ಲೊಂಚೂರು ಹೇಳೇಬಿಟ್ಟಿರೋರು.
ಇದರಿಂದ ರಾಜ್ ಚಿತ್ರಗಳು ಬಂದಾಗಲೆಲ್ಲಾ ನಮ್ಮ ಮನೆ ಕುರುಕ್ಷೇತ್ರ ಆಗಿರ್ತಿತ್ತು. ಯಾಕೇಂದ್ರೆ ಚಿತ್ರ ಬಂದು ಊರಲ್ಲಿರೋರೆಲ್ಲಾ ನೋಡಿ ಮಧ್ಯ ಮಧ್ಯ ಸನ್ನಿವೇಶಗಳೆಲ್ಲಾ ಡಗ್ ಡಗ್ ಅಂತ ಎಗರಿಹೋಗೋಷ್ಟು ಹಳೇದಾಗ್ತಾ ಬಂದಿದ್ರೂ ನಮ್ಮಣ್ಣ ನಮ್ಮನ್ನ ಆ ಚಿತ್ರಕ್ಕೆ ಕರೆದುಕೊಂಡು ಹೋಗಕ್ಕೆ ಮನಸ್ಸು ಮಾಡ್ತಿರಲಿಲ್ಲ. ದಿನಕ್ಕೊಂದು ನೆಪ ಹೇಳ್ತಿದ್ದಿದಿದ್ದು ನನಗೆ ಇನ್ನೂ ಹಸಿರು. ಬಿಡುಗಡೆಯಾದ ತಕ್ಷಣ ಸಿನೆಮಾಗೆ ಹೋದರೆ ಬರೀ ವಿಷಲ್ ಹೊಡೀತಿರ್ತಾರೆ, ಕಿರಿಚಾಟ, ಒಂದೂ ಮಾತು ಕೇಳಲ್ಲ ಅನ್ನೋದೊಂದು ಅವರು ನಮ್ಮನ್ನು ಮುಂಚೆ ಕರೆದುಕೊಂಡು ಹೋಗದ್ದಕ್ಕೆ ಕೊಡುತ್ತಿದ್ದ ಕಾರಣ. ಅಮ್ಮ, ಅಣ್ಣ ಮಾಡೋದು ನೋಡಿ ಕೊನೆಗೆ 'ಕರ್ಕೋಂಡು ಹೋಗ್ಬಾರ್ದಾ ಮಕ್ಕಳನ್ನ ನೀವಂತೂ ಅತೀ ಮಾಡ್ತೀರ' ಅಂತ ಹುಸಿಮುನಿಸಿನಿಂದ ಬೈಯ್ಯೋಳು . ಆಗ ನಮಗೆ ಇನ್ನೂ ದು:ಖ ಉಕ್ಕಿ 'ಎಲ್ರೂ ಎಷ್ಟು ಮುಂಚೆನೇ ಸಿನೆಮಾ ನೋಡಿರ್ತಾರೆ ನಾವು ಚಿತ್ರ ಎತ್ತಂಗಡಿ ಆಗೋ ಕಾಲ ಬಂದ್ರೂ ಇನ್ನೂ ನೋಡಿಲ್ಲ' ಅಂತ ಗೋಳಾಡ್ತಾ ಇದ್ವಿ. ಅದಕ್ಕೆ ಅಣ್ಣ 'ನಾನೇನೂ ಕರ್ಕೊಂಡು ಹೋಗಲ್ಲ ಅಂತ ಅಂದಿದ್ದೀನಾ, ಸಲ್ಪ ನಿಧಾನವಾಗಿ ಹೋದ್ರಾಯ್ತು ಅಂತ' ಅನ್ನೋದ್ರೊಳಗೆ ನಾನು 'ಹೋಗಣ್ಣ ನಮ್ಮನ್ನ ನೀನು ಬೇಗ ಕರ್ಕೋಂಡು ಹೋಗಲ್ಲ , ನನ್ನ ಸ್ನೇಹಿತರೆಲ್ಲಾ ಮೊದಲೇ ನೋಡಿ ನನಗೆ ಎಲ್ಲಾ ಕಥೆನೂ ಹೇಳೇ ಬಿಟ್ಟಿರುತ್ತಾರೆ ನಂಗೆ ನೋಡಕ್ಕೆ ಏನೂ ಉಳಿದಿರೋದಿಲ್ಲ' ಅಂತ ಅಳ್ತಾ ಇರ್ತಿದ್ದೆ. ಆಗ ಅಣ್ಣ ಅದಕ್ಕೂ ಬಿಡ್ತಿರಲಿಲ್ಲ 'ಎಲ್ಲಾ ಕಥೆನೂ ಹೇಳಿಬಿಟ್ಟಿದ್ದಾರಾ? ಹೋಗ್ಲಿ ಬಿಡು ಇನ್ನು ಸಿನೆಮಾ ನೋಡೋದಕ್ಕೆ ಏನಿದೆ? ಹೋಗ್ದೇ ಇದ್ರೆ ದುಡ್ಡಾದ್ರೂ ಮಿಗತ್ತೆ' ಅಂತ ಮತ್ತೊಂದು ತಗಾದೆ ತೆಗೆಯೋರು. ಒಟ್ಟಿನಲ್ಲಿ ರಾಜ್ ಚಿತ್ರಗಳು ಬಂದರೆ ನಮ್ಮ ಮನೆಯಲ್ಲಿ ಒಂಥರಾ ಯುದ್ದದ ವಾತಾವರಣ ಇರುತ್ತಿತ್ತು.
ಅದಕ್ಕೆ ತಕ್ಕಂತೆ ಆ ಥಿಯೇಟರ್ ಮಾನೇಜರ್, ನಮ್ಮ ತಂದೆಯ ಶಿಷ್ಯನ ಕೈಲಿ ಹೇಳಿ ಕಳಿಸುತ್ತಿದ್ದರು. 'ಕೃಷ್ಣಮೂರ್ತಿಗೆ ಹೇಳು ಇವತ್ತು ರಾಜ್ ಕುಮಾರ್ ಚಿತ್ರದ ಕೊನೇ ದಿನ, ಬರೋದಾದರೆ 4 ಟಿಕೇಟ್ ಕಳಿಸುತ್ತೇನೆ' ಅಂತ, ಆಗ ನಮ್ಮ ತಂದೆ ಸರಿ ಅಂತ ಹೇಳಿಕಳಿಸುತ್ತಿದ್ದರು ಅಂತ ಕಾಣತ್ತೆ. ಆವತ್ತು ಸಂಜೆ ಬೇಗ ಮನೆಗೆ ಬಂದು ಬೇಗ ಊಟ ಮಾಡೋಣ ಅಂದರೆ ನಮಗೆ ಒಳಗೊಳಗೇ ಖುಷಿ. ಇವತ್ತು ಸಿನೆಮಾಗೆ ಹೋಗೋದು ಗ್ಯಾರಂಟಿ ಅಂತ. ಈ ರೀತಿ ನಮ್ಮ ತಂದೆ ನಮ್ಮನ್ನ ಗೋಳುಗುಟ್ಟಿಸಿ ನಮ್ಮನ್ನು ರಾಜ್ ಚಿತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಊರೋರೆಲ್ಲಾ ನೋಡಿ ಬಿಟ್ಟ ಚಿತ್ರವನ್ನು ನಾವು ಕೊನೇಯಲ್ಲಿ ನೋಡಿ ಬಂದರೂ ನಾವೂ ಏನೋ ಸಾಧನೆ ಮಾಡಿದ್ದೇವೆ ಅನ್ನೋ ಹೆಮ್ಮೆ ಇರುತ್ತಿತ್ತು.
ಏನೇ ಆದರೂ ಸ್ನೇಹಿತರ ಜೊತೆಗೆ ಮಾತ್ರಾ ನಮ್ಮನ್ನು ರಾಜ್ ಚಿತ್ರಗಳಿಗೆ ಕಳಿಸುತ್ತಿರಲಿಲ್ಲ, ಅಲ್ಲಿ ಯಾವಾಗಲೂ ದೊಂಬಿ, ಗಲಾಟೆ , ಹೆಣ್ಣುಮಕ್ಕಳು ಹಾಗೆಲ್ಲಾ ಹೋಗಬಾರದು ಅನ್ನೋದು ಅವರ ಒಂದು ವಾದ. ನಾನು ಸ್ಕೂಲ್, ಕಾಲೇಜ್ ನಲ್ಲಿ ಓದೋವಾಗ ಒಂದು ದಿನವೂ ಸ್ನೇಹಿತರ ಜೊತೆ ಸಿನೆಮಾಗೆ ಹೋದ ನೆನಪೇ ಇಲ್ಲ. ಬೆಂಗಳೂರಿಗೆ ಬಂದ ಮೇಲೂ ಸಹ ಅಣ್ಣನೊಂದಿಗೇ ರಾಜ್ ಚಿತ್ರಗಳ ವೀಕ್ಷಣೆ. ಪ್ರತಿ ಚಿತ್ರದಲ್ಲೂ ಅಣ್ಣ ರಾಜ್ ಕುಮಾರ್ ಬಟ್ಟೆಯಿಂದಾ ಹಿಡಿದು, ಹಾಡುಗಳವರೆಗೂ ಆಕ್ಷೇಪಿಸುತ್ತಾ ನಮ್ಮನ್ನು ನಗಿಸುತ್ತಿದ್ದರು. ರಾಜ್ ಬಟ್ಟೆ ವಿಷಯಕ್ಕೆ ಬಂದರೆ ಎಷ್ಟೋ ಚಿತ್ರಗಳಲ್ಲಿ ರಾಜ್ ತುಂಬಾ ತೆಳುವಾದ ಮೇಲಂಗಿಯನ್ನು ಧರಿಸುತ್ತಿದ್ದರು ಆಗ ಅಣ್ಣ 'ಇದು ಪಾರ್ವತಮ್ಮನ ಸೀರೆ ಹರಿದು ಹೊಲೆಸಿರೋದು' ಅಂತ ಅನ್ನೋರು, ಹಾಡಿನ ವಿಷಯ ಬಂದಾಗ 'ಕಣ್ಣಲ್ಲಿ ತುಂಬಿ ಚಲುವ ಎದೆಯಲ್ಲಿ ತುಂಬಿ ಒಲವಾ ಬಾಳಲ್ಲಿ ತುಂಬಿದೇ ಉಲ್ಲಾಸವಾ' ಅನ್ನೋದನ್ನ 'ಬಾಯಲ್ಲಿ ತುಂಬಿದೇ ಹಲ್ವಾ' ಅಂತ ಹಾಡೋರು. ಆಗ ನಮಗೆ ಸಿಟ್ಟು ಬರೋದು ಸುಮ್ನಿರಣ್ಣ ಯಾವಾಗಲೂ ನಿನಗೆ ಇದೇ ಕೆಲ್ಸ ಅಂತ ಬೈತಿದ್ವಿ.
ನನಗೆ ನೆನಪಿದ್ದಂತೆ ನಾವೆಲ್ಲಾ ಒಟ್ಟಿಗೆ ನೋಡಿದ ರಾಜ್ ಚಿತ್ರ ಅಂದ್ರೆ 'ಜೀವನ ಚೈತ್ರ', ಅದೇ ಕೊನೆ ಮತ್ತೆ ರಾಜ್ ಹೊಸ ಚಿತ್ರಗಳನ್ನು ನಾವುಗಳು ಒಟ್ಟಿಗೆ ನೋಡಲೇ ಇಲ್ಲ. ಅದಕ್ಕೆ ತಕ್ಕಂತೆ ನಾನು ದೇಶವೇ ಬಿಟ್ಟೆ. ನಮ್ಮ ಅಣ್ಣ ಈಗ ನಮ್ಮೊಂದಿಗೆ ಇಲ್ಲ . ಅದೇ ಥರ ಕನ್ನಡದ ಎಲ್ಲರ ಕಣ್ಮಣಿ ಎಂದೇ ಹೆಸರಾಗಿದ್ದ ರಾಜ್ ಕುಮಾರ್ ಕೂಡ ಇಲ್ಲ. ಆದರೂ ರಾಜ್ ನೋಡಿದಾಗ ನನಗೆ ಇದೆಲ್ಲಾ ತುಂಬಾ ನೆನಪಾಗುತ್ತದೆ. ನಮ್ಮ ಅಣ್ಣ ರಾಜ್ ಕುಮಾರ್ ರವರನ್ನು ಎಷ್ಟೇ ಅಣಕಿಸಿದರೂ ರಾಜ್ ಹಾಡುಗಳೆಂದರೆ ಅಚ್ಚುಮೆಚ್ಚು ಅದರಲ್ಲೂ 'ಎರಡು ನಕ್ಷತ್ರಗಳು' ಚಿತ್ರದ 'ಗೆಳತೀ ಬಾರದೂ ಇಂಥಾ ಸಮಯಾ ಅನುರಾಗ ಬೇಕೆಂದಿದೇ ವಿರಹಾ' ಹಾಡನ್ನು ಬಹಳ ಆಸೆಯಿಂದ ಕೇಳುತ್ತಿದ್ದರು. ಅದೇ ಥರ ಬಹು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಣ್ಣಾವ್ರ ಚಿತ್ರಕ್ಕೆ ಕರೆದುಕೊಂಡು ಹೋಗದೆ ಗೋಳು ಗುಟ್ಟಿಸುತ್ತಿದ್ದ ಅಣ್ಣ, ನಾನಿರುವುದೆ ನಿಮಗಾಗಿ ಎಂದು ಹಾಡುತ್ತಿದ್ದ ಅಣ್ಣಾವ್ರು ಇಬ್ಬರೂ ಇಲ್ಲ. ಈಗ ಉಳಿದಿರುವುದು ಆ ಹಳೆಯ ನೆನಪಿನ ಪಳೆಯುಳಿಕೆಗಳು ಮಾತ್ರಾ.
ಇಂದಿಗೆ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಒಂದು ವರ್ಷವಾಯಿತು. ಅವರನ್ನು ಈ ರೀತಿಯಾಗಿ ನೆನಪು ಮಾಡಿಕೊಂಡಿದ್ದೇನೆ. ನಮ್ಮ ಅಣ್ಣ ಮತ್ತು ನಮ್ಮೆಲ್ಲರ ಅಚ್ಚುಮೆಚ್ಚಿನ ಅಣ್ಣಾವ್ರು ಇಬ್ಬರ ನೆನಪೂ ಹೃದಯದಲ್ಲಿ ಶಾಶ್ವತ.
ಚಿತ್ರ: ಅರಿಶಿನ ಕುಂಕುಮ (1970)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಡಾಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಹಾಡು ಕೇಳಿ.
ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲ
ಋತುಗಳೂ ಕಾಲದ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ......ನಾನೂ ನೀನೂ...
ಕಣ್ಣೂ ಕಣ್ಣೂ ಕಲೆತಿರಲೂ
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲೂ
ಮಧುಮಾಸವೇ ಪ್ರತಿಕ್ಷಣವೆಲ್ಲಾ.....2....
ಮನಸೂ ಮನಸೂ ಬೆರೆತಿರಲೂ
ಅಂದವೇ ನೋಡಿದ ಕಡೆಯಿಲ್ಲಾ
ತನುವು ತನುವೂ ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ......2....
ಸರಸದಿ ವೇಳೆಯು ಕಳೆದಿರಲೂ
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವೂ ಸಾಗಿರಲೂ
ಹರುಷವೂ ನಮಗೇ ಬದುಕೆಲ್ಲಾ.....2....
ಒಲವಿನ ಗೀತೆಯ ಹಾಡುತಿರೇ
ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸವಿಯನು ಸವಿಯುತಿದೇ
ಬಾಳಿನ ಜೋಡಿಯ ಕಣ್ಣುಗಳೂ.....2.....
ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ....ನಾನೂ ನೀನೂ...
* * * * * * * *
ಅಯ್ಯೋ ಮತ್ತೆ ಬಂತಲ್ಲಪ್ಪ ಈ ಬೇಸಿಗೆ. ಥೂ ಸಾಕಪ್ಪಾ ಸಾಕು ಈ ಚರ್ಮ ಸುಡೋ ಬಿಸಿಲು, ಧಗೆ, ಬೆವರು. ದಿನಕ್ಕೆ ಎರೆಡೆರಡು ಸಾರಿ ಸ್ನಾನಾ ಮಾಡೋ ಪರಿಸ್ಥಿತಿ. ಇದು ನನ್ನ ಸ್ಥಿತಿಯಾದರೆ ಅಮೇರಿಕದ ಜನರ ಪರಿಯೇ ಬೇರೆ. ಅವರಿಗೆ ಈ ಬಿಸಿಲುಗಾಲ ಎಂದರೆ ಅದೇನು ಖುಷಿ. ಬೇಸಿಗೆ ಬಂತೆಂದರೆ ಸಾಕು ಮನೆ ಮಂದಿಯೆಲ್ಲಾ ಬೀದಿಯಲ್ಲೇ ಇರುತ್ತಾರೆ what a nice weather ಅಂದುಕೊಂಡು. ಆದರೆ ನನಗೆ ಮೊದಲಿನಿಂದಲೂ ಬೇಸಿಗೆ ಬಂದರೆ ದ್ವಂದ್ವ ಅನುಭವ. ಬಿಸಿಲಿನ ತಾಪದ ಭಯವೊಂದು ಕಡೆಯಾದರೆ, ಬೇಸಿಗೆ ರಜಕ್ಕೆ ಅಜ್ಜಿ ಮನೆಗೆ ಹೋಗಿ ಮಜಾ ಮಾಡುವ ಖುಷಿಯೊಂದು ಕಡೆ. ಒಟ್ಟಿನಲ್ಲಿ ಬೇಸಿಗೆಯ ಬಿಸಿಲು ಮಾತ್ರ ಬೇಡ, ಬೇಸಿಗೆ ರಜಾ ಮಾತ್ರ ಬೇಕು ಅನ್ನುವಂತಾಗಿತ್ತು.
ಅಜ್ಜಿ ಮನೆಗೆ ಹೋಗಿದ್ದೇ ತಡ ಎಲ್ಲಾ ಮಕ್ಕಳು ಸೇರಿ ಮನೆಯೇ ತಲೆ ಕೆಳಗೆ ಮಾಡುತ್ತಿದ್ದುದು ಇನ್ನೂ ಮನದಲ್ಲಿ ಹಚ್ಚಹಸಿರು. ಸದಾ ಬಿಸಿಲಿನಲ್ಲಿ ಆಡುವ ನಮ್ಮನ್ನು ನೋಡಿ ದೊಡ್ಡವರು "ಏನು ಮಕ್ಕಳಪ್ಪಾ ಇವು ಇವಕ್ಕೆ ಬಿಸಿಲು ಮೈಗೇ ಹತ್ತುವುದಿಲ್ವೋ ಏನೋ" ಅಂತ ಬೈಯ್ಯುವಾಗಲೂ ಅವರ ಮಾತಿನಲ್ಲಿದ್ದ ಕಳಕಳಿ ಗೋಚರವೇ ಆಗುತ್ತಿರಲಿಲ್ಲ ಅನ್ನಿಸತ್ತೆ. ಮಕ್ಕಳು ಬಂದಿದ್ದಾರೆಂದು ಅಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು, ಹೇಳುತ್ತಿದ್ದ ಕತೆಗಳು ಈಗಲೂ ಅದೆಂತಹ ಹಿತದ ಅನುಭವವನ್ನುಕೊಡುತ್ತದೆ. ಇಷ್ಟೆಲ್ಲದರ ನಡುವೆ ಬಿಸಿಲಿಗೆ ಬೇಸರಿಸಿ ಬೈಯ್ಯುತ್ತಿದ್ದ ನನಗೆ ಬೇಸಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ. ಅಜ್ಜಿ-ತಾತ, ಮಾವಾ-ಅತ್ತೆ, ದೊಡ್ಡಪ್ಪ-ದೊಡ್ಡಮ್ಮಂದಿರ ಅಕ್ಕರೆಯ ತಂಪಿನಲ್ಲಿ ಮಿಂದೇಳುತ್ತಿದ್ದ ನನಗೆ ಬಹುಷ: ಬೇಸಿಗೆ ಬಿಸಿಲು ಮರೆತೇ ಹೋಗುತ್ತಿತ್ತೋ ಏನೋ? ಇನ್ನು ಸ್ಕೂಲು, ಹೋಂವರ್ಕ್, ಕಡಿಮೆ ಅಂಕ ತೆಗೆದರೆ ಸಿಗುತ್ತಿದ್ದ ಬೈಗಳ ಯಾವುದೂ ಇಲ್ಲ. ಇದೆಲ್ಲವೂ ಬೇಸಿಗೆಯಲ್ಲಿ ತಾನೇ ಲಭ್ಯ.
ಇವತ್ತಿಗೂ ನನಗೆ ಬೇಸಿಗೆ ಅಂದರೆ ಸಾಕು ಮುಖ ಮುದುರುತ್ತದೆ. ಮೊದಲಿನಂತೆ ರಜೆ ಬಂದರೆ ಅಜ್ಜಿ ಮನೆಗೆ ಓಡಿ ಆಡುತ್ತಿದ್ದ ಕಾಲವೇ ಮುಗಿದು ಹೋಗಿದೆ. ಆದರೂ ಆ ಹಿಂದಿನ ಬೇಸಿಗೆ ಕಾಲವನ್ನು ನೆನೆಸಿಕೊಳ್ಳುವುದೆಂದರೆ ನನಗೆ ತುಂಬಾ ಮೆಚ್ಚು. ಪ್ರೀತಿಯ ಮಳೆಗರೆಯುತ್ತಿದ್ದ ಆ ಹಿರಿಯ ಜೀವಗಳು ಕಣ್ಮರೆಯಾಗಿ ಎಷ್ಟೋ ಕಾಲ ಉರುಳಿದ್ದರೂ ಆ ಬೇಸಿಗೆ ರಜಾ ದಿನಗಳು ಈಗಲೂ ಕಾಡುತ್ತದೆ.
ಈಗ ಬರೀ ಬಿಸಿಲನ್ನು ಬೈದುಕೊಳ್ಳುತ್ತಾ ಯಾವಾಗ ಈ ಬೇಸಿಗೆ ಕಳೆದು ಮಳೆಗಾಲ ಶುರುವಾಗತ್ತೊ ಎಂದು ಕಾಯುವುದೇ ಕೆಲಸವಾಗಿದೆ. ಈ ದೇಶದಲ್ಲಂತೂ ಮೈಕೈಗೆ sunscreen ಅಥವಾ sunblock ಬಳಿದುಕೊಂಡು ಕಟುಬಿಸಿಲಿಗೆ ಮೈಯೊಡ್ಡಿ ಅರೆಬೆತ್ತಲೆ ಓಡಾಡುವವರನ್ನು ನೋಡಿ ನನಗ್ಯಾಕೆ ಈ ಬಿಸಿಲು ಹಿಂಸೆ ಅನ್ನಿಸುತ್ತದೆ ತಿಳಿಯದಾಗಿದೆ. ಈಗ ಇಲ್ಲಿ Daylight Saving ಅಂತೆ ರಾತ್ರಿ 9 ಗಂಟೆ ತನಕ ಕುದಿಯುವ ಬಿಸಿಲನ್ನು ಹೇಗಪ್ಪಾ ತಡೆದುಕೊಳ್ಳುವುದೂ ಅನ್ನಿಸುತ್ತಿದೆ.
ಬಾಲ್ಯದಲ್ಲಿ ನಾನು ಕಳೆದ ಈ ಮೂರೂ ಕಾಲಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ Raincoat ಧರಿಸಿ ತಮ್ಮನ ಕೈ ಹಿಡಿದು ನಡೆಯುತ್ತಿದ್ದ ನೆನೆಪೊಂದಾದರೆ, ಚಳಿಗಾಲದಲ್ಲಿ ಅಮ್ಮ ಮಕ್ಕಳಿಗೆ ಚಳಿಯಾಗತ್ತೆ ಅಂತ ಸ್ವೆಟರ್ ಹಾಕಿ ಸ್ಕಾರ್ಪ್ ಕಟ್ಟಿ ಕಳಿಸುತ್ತಿದ್ದರೆ ಅಣ್ಣ ಮಕ್ಕಳಿಗೆ ತಣ್ಣೀರಿನಲ್ಲಿ ಕೈಕಾಲು ತೊಳೆದರೆ ಚಳಿಯಾಗತ್ತೆ ಅಂತ ಸದಾ ಹಂಡೆಒಲೆಗೆ ಹೊಟ್ಟು ತುಂಬಿ ಬಿಸಿನೀರು ಕಾಸಿ, ಅದೇ ಒಲೆಯಲ್ಲಿನ ಬೂದಿಕೆಂಡದಲ್ಲಿ ಹಲಸಿನಬೀಜ, ಗೆಣಸು ಸುಟ್ಟು ಕೊಡುತ್ತಿದ್ದ ನೆನಪು. ಇನ್ನು ಬೇಸಿಗೆಯಲ್ಲಿ ಅಣ್ಣ ನಮ್ಮ ಲಗ್ಗೇಜ್ ಹೊತ್ತು ತಂದು ಅಮ್ಮನನ್ನು ನಮ್ಮನ್ನು ರಜಕ್ಕೆ ಅಜ್ಜಿ ಮನೆಗೆ ಕಳಿಸಿಕೊಡುತ್ತಿದ್ದ ನೆನಪು. ಒಟ್ಟಿನಲ್ಲಿ ಮೂರು ಕಾಲವೂ ಸುಂದರ ನೆನಪುಗಳ ಆಗರ.
ಆದರೂ ಕಾಲಗಳು ಬಿಸಿಲಾದರೇನೂ ಮಳೆಯಾದರೇನೂ ಅಂತ ಒಂದನೊಂದು ಅಟ್ಟಿಸಿಕೊಂಡು ಬರುತ್ತಲೇ ಇವೆ. ಆ ಕಾಲದೋಟದಲ್ಲಿ ನಾವೂ ಎಷ್ಟೋ ಬಾರಿ ತಿರಿಗಿದ್ದಾಗಿದೆ ಇನ್ನೂ ತಿರುಗುತ್ತಲೇ ಇರುತ್ತೇವೆ. ಆದರೂ ಬೇಸಿಗೆ ಬಂದರೆ ಅದನ್ನು ಬೈಯ್ಯುವುದಂತೂ ತಪಿಲ್ಲ.
ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳು ಹೇಗೋ????
ಹಾಡು ಕೇಳಿ.
ಶಿಲೆಯಲ್ಲು ನೀನೇ ಅಲೇಯಲ್ಲು ನೀನೇ
ನಿನಕಂಡ ಎಲ್ಲೆಲ್ಲು ನಾ ಸ್ವಾಮೀ
ಈ ನೀಲಿ ಬಾನು ಆ ನೀಲಿ ಕಡಲೂ
ಈ ನಿನ್ನ ಮೈ ಬಣ್ಣವೇ ರಾಮಾ......ಶಿಲೆಯಲ್ಲು ನೀನೇ....
ನಗೋ ಹೂವಿನಲ್ಲಿ ಈ ಮೊಗವನ್ನು ಕಂಡೆ
ಬಿಳಿ ಹಾಲ ನೊರೆಯಲ್ಲಿ ಮನ:ಶಾಂತಿ ಕಂಡೆ
ನಿನ್ನ ಪಾದದಲ್ಲೀ ಆ......ಆ....ಆ...
ನಿನ್ನ ಪಾದದಲ್ಲೀ ಚಿದಾನಂದ ಕಂಡೆ
ನಾ ಕುಡಿದೆ ರಾಮಾಮೃತಾ ರಾಮಾ......ಶಿಲೆಯಲ್ಲು ನೀನೇ....
ನೀ ನೀಗು ಬಾರಾ ಈ ಮನದಂಧಕಾರಾ
ನಿನ್ನ ಪ್ರೇಮ ಸುಧೆಯಿಂದ ಸುಖವನ್ನು ತಾರಾ
ಓ ಮೇಘಶ್ಯಾಮಾ ಪರಿಪೂರ್ಣಧಾಮಾ
ಈ ದಿವ್ಯ ನಾಮಾ ಸದಾ ಶಾಂತಿಧಾಮಾ
ರಘುರಾಮ ಚರಣಾಮೃತಾ ರಾಮಾ......ಶಿಲೆಯಲ್ಲು ನೀನೇ...
* * * * * * * *
ಚಿತ್ರ: ಶ್ರೀಮಂತನ ಮಗಳು(1977)
ಸಾಹಿತಿ: ಚಿ.ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯಕ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಬಂದಿದೇ ಹೊಸ ವಸಂತ ಬಾಳಿನಲೀ
ಅನುಕ್ಷಣ ಹೊಸತನ ಸುಖವಾ ನಿನಗೇ ತರಲೀ..
ನಡೆವ ಹಾದಿ ಹೂವ ಹಾಸಲೀ
ನಗುತ ನಗುತ ಬಾಳು ಸಾಗಲೀ
ಹರುಷ ಪ್ರತಿ ನಿಮಿಷಾ ನಿನ್ನದಾಗಲೀ...
ಸ್ನೇಹವೆಂಬ ಬಳ್ಳಿ ಚಿಗುರಲೀ
ಪ್ರೇಮವೆಂಬ ಹೂವು ಅರಳಲೀ
ಬಯಕೆ ನಿನ್ನೆಣಿಕೇ ಭಾಗ್ಯ ನೀಡಲೀ...
ಬಂದಿದೇ ಹೊಸ ವಸಂತ ಬಾಳಿನಲೀ.....
* * * * * *
ಚಿತ್ರ: ಕುಲವಧು(1963)
ಕವಿ: ದ.ರಾ.ಬೇಂದ್ರೆ(ಅಂಬಿಕಾತನಯದತ್ತ)
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಎಸ್.ಜಾನಕಿ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರಿತಿದೆ
ಹೊಸ ವರುಷಕೆ ಹೊಸ ಹರುಷವಾ ಹೊಸತು ಹೊಸತು ತರುತಿದೇ...
ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೇ
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪ ಸೂಸಿ
ಜೀವ ಕಳೆಯ ತರುತಿದೆ...
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ದಾತಗೇ
ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೇ ಏತಕೋ...
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ....
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೇ...
*** *** *** *** *** ***
ಚಿತ್ರ: ಮನೆ ಅಳಿಯ(1964)
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಸಂಗೀತ: ಟಿ.ಚಲಪತಿರಾವ್
ಗಾಯನ: ಪಿ.ಬಿ.ಶ್ರೀನಿವಾಸ್
ಪ್ರೀತಿಯ ಹೂಗಳ ಮುಡಿದವಳೇ
ಬಳುಕುವ ಬಳ್ಳಿಯ ಮೈಯ್ಯವಳೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...
ಕರೆದಿದೆ ನಿನ್ನಾ ಮುಡಿಯರಳು
ಅರಿಯದೆ ಸಂಚನು ನಾನಿರಲು
ತಟ್ಟನೆ ಚಿನ್ನದ ಜಿಂಕೆಯೊಲು
ನೀ ಇನ್ನೆಲ್ಲಿಯೋ ಹಾರಿರಲು
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...
ಬಲ್ಲವನಲ್ಲವೆ ನಾ ನಿನಗೇ
ಎಲ್ಲೂ ಎಂದೂ ನಿನ್ನವನೇ
ನಾಚುವ ಮೊಗ್ಗೇ ಬಾ ಬಳಿಗೇ
ಆಸೆಯ ಬೀರುತ ನನ್ನೆಡೆಗೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...
ಕಂಗಳ ಮುಚ್ಚಿದ ಕೈ ಬೆರಳೇ
ಪ್ರೀತಿಯ ನೋಟವ ಸಾರುತಿದೇ
ಉಕ್ಕುವ ಹರುಷದ ಹೊಳೆಯೊಳಗೇ
ಬಾ ಮೀಯುವ ಬಾರೇ ನನ್ನವಳೇ
ಬಾ ಬಾ ಬಾರೇ ಬಾ ಬಾ ಬಾರೇ ನನ್ನವಳೇ...
* * * * * * * * * * * * * * * * * * * * *
ಚಿತ್ರ:ಮಧುರಸಂಗಮ(1978)
ಸಾಹಿತ್ಯ:ಆರ್.ಎನ್.ಜಯಗೋಪಾಲ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಎಸ್.ಜಾನಕಿ
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....ತಾಯಿಯಾ...
ಸೃಷ್ಟಿ ಮಾಡುವ ಬ್ರಹ್ಮದೇವಾ
ಭಕ್ತ ಬಾಂಧವ ಮಹಾ ವಿಷ್ಣು
ಪ್ರಳಯಕಾಲಕ ಮಹಾದೇವ
ಹೆತ್ತ ಕರುಳನು ಕಾಣದೇ..೨..ಶಿಲೆಗಳಾದರು ಲೋಕದೇ....ತಾಯಿಯಾ...
ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೇ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ..೨..ತಾಯಿ ಮಮತೆಯ ಕೊಡುವರೇ....ತಾಯಿಯಾ...
*** *** *** ***
ಶ್ರೀ ವ್ಯಾಸರಾಜರ ಆರಾಧನಾ ಪ್ರಯುಕ್ತ.
ಉಗಾಭೋಗ: ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ರಚನೆ: ಶ್ರೀ ವ್ಯಾಸರಾಜ ತೀರ್ಥರು.
ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನ ಜಾರನೆಂದರೆ ಸಾಲದೇ
ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೇ
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೇ
ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ
ಪತಿತ ಪಾವನನೆಂದು ಕರೆದರೆ ಸಾಲದೇ
ಇಂತಿಪ್ಪ ಮಹಿಮೆಗಳನೊಂದನಾದರೂ ಒಮ್ಮೆ
ಸಂತಸದಿ ನೆನೆಯುವರಾ ಸಲಹುವಾ ಶ್ರೀಕೃಷ್ಣಾ .....
*******ಶ್ರೀಕೃಷ್ಣಾರ್ಪಣಮಸ್ತು********
ಗುರುಶ್ರೀ ವಾದಿರಾಜರ ಆರಾಧನಾ ಪ್ರಯುಕ್ತ.
ಕವನ: ನೀ ಬರುವ ದಾರಿಯಲಿ
ಕವಿ: ಕೆ.ಎಸ್.ನರಸಿಂಹಸ್ವಾಮಿ.
ನೀ ಬರುವ ದಾರಿಯಲಿ ಹಗಲು ತಂಪಾಗಿ
ಬೇಲಿಗಳ ಸಾಲಿನಲಿ ಹಸುರು ಕೆಂಪಾಗಿ
ಪಯಣ ಮುಗಿಯುವ ತನಕ ಎಳೆ ಬಿಸಿಲ ಮಣಿ ಕನಕ
ಸಾಲು ಮರಗಳ ಮೇಲೆ ಸೊಬಗ ಸುರಿದಿರಲಿ
ನೀ ಬರುವ ದಾರಿಯಲಿ ಹಕ್ಕಿಗಳು ಹಾಡಿ
ಬೆಳ್ದಿಂಗಳಿಂಪಿನಲಿ ತಾರೆಗಳು ಮೂಡಿ
ಕನಸು ಹಬ್ಬಲಿ ನಿನ್ನ ಕಣ್ಣ ಬಳಿ ಚಿನ್ನ
ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ
ನೀ ಬರುವ ದಾರಿಯಲಿ ಬನದೆಲರು ಸುಳಿದೂ
ಸಂತಸದ ಇರುಳಿನಲಿ ಆದುದನು ನುಡಿದು
ಮುಂದೆ ಕಾದಿಹ ನೂರು ಹರುಷಗಳು ಕಣ್ ತೆರೆದು
ಪಯಣವೋ ನಿಲುಗಡೆಯೋ ನೀನರಿಯದಂತಿರಲಿ
------ ------- ------ ------- ------
ಚಿತ್ರ: ಮರಳಿಗೂಡಿಗೆ (1984)
ಸಾಹಿತ್ಯ: ಕೆ.ಎಸ್.ನಿಸ್ಸಾರ್ ಅಹಮದ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಈಗ ಬರುತ್ತಿರುವ ಧಾರಾವಾಹಿಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ತುಳಸೀವನದಲ್ಲಿ ಕಿರುತೆರೆ-ಕಿರಿಕಿರಿ ಲೇಖನ ಓದುವಾಗ ಈಗಿನ ದಾರವಾಹಿಗಳ ಬಗೆಗೆ ನನ್ನ ಅನಿಸಿಕೆ ಮತ್ತು ಅಭಿಪ್ರಾಯ.
ಈಗಿನ ಧಾರಾವಾಹಿಗಳ ಕುರಿತು ಹೇಳಬೇಕೆಂದರೆ ಮೊದಲಿಗೆ ಒಂದು ಮೊಲಕತೆಯನ್ನು ತೆಗೆದುಕೊಂಡು ಅದನ್ನು ಎದ್ವಾತದ್ವಾ ಎಳೆದು ದಾರವಾಹಿಗಳನ್ನು ಧಾರಾಕಾರವಾಗಿ ಎಳೆದಾಡುತ್ತಾರೆ. ಇನ್ನು ಈಗ ತೆಗೆಯುತ್ತಿರುವ ಎಲ್ಲಾ ಧಾರಾವಾಹಿಗಳು ಸಾಮಾನ್ಯವಾಗಿ ಒಂದೇ ಥರದ ಕತೆಗಳನ್ನು ಹೊಂದಿರುತ್ತವೆ ಅನ್ನಿಸುತ್ತದೆ. ಮನೆಯಲ್ಲಿ ನಡೆಯುವ ಎಲ್ಲಾ ರಾಜಕೀಯದ ಬಗ್ಗೆ ಸುಳಿವೇ ತಿಳಿಯದಂತಿರುವ ಪೆದ್ದು ಗಂಡಸರು, ಮುಖದ ತುಂಬಾ ಮೇಕಪ್ ಮೆತ್ತಿಕೊಂಡು(ಬೆಳಿಗ್ಗೆ ಏಳುವಾಗಲೇ) ಚಾಡಿಮಾತು, ಹೊಟ್ಟೆಕಿಚ್ಚು ಮತ್ತು ಯಾವುದೋ ದ್ವೇಷದಿಂದ ಸಂಸಾರವನ್ನೇ ನುಚ್ಚುನೂರು ಮಾಡಲು ಹೊರಡುವ ಕೆಟ್ಟ ಹೆಣ್ಣುಗಳು, ಈ ಥರದ ದಾರಾವಾಹಿಗಳು ಈಗ ಎಲ್ಲಾ ಭಾಷೆಯಲ್ಲೂ ಕಾಣಬರುತ್ತಿರುವ ಚಿತ್ರಗಳು. ಇನ್ನೂ ಎಲ್ಲಕ್ಕಿಂತ ಮುಖ್ಯವಾದ್ದು ಏನೆಂದರೆ 'ಒಬ್ಬ ಗಂಡಸು ಅಥವಾ ಹೆಂಗಸರು ಎಷ್ಟು ಬೇಕಾದರೂ ಅನೈತಿದ ಸಂಬಂಧವನ್ನು ಹೊಂದಿರುವಂತೆ ತೋರಿಸುವುದು' ಇದು ತೀರಾ ಅಸಹ್ಯವನ್ನು ಮೂಡಿಸುವಂತಾದ್ದು. ನೈತಿಕತೆಯನ್ನೇ ಮರೆತು ವಿವಾಹೇತರ ಸಂಬಂಧಗಳು ಬಹಳ ಮಾಮೂಲು ಎನ್ನುವಂತೆ ತೋರಿಸಹೊರಟಿದ್ದಾರೆ. ಸತ್ತ ವ್ಯಕ್ತಿ ಮತ್ತೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವುದು. ಇದ್ದಕ್ಕಿದ್ದಂತೆ ಪಾತ್ರಗಳೇ ಬದಲಾಗಿಹೋಗುವುದು. ಮಾಮೂಲಾಗಿಬಿಟ್ಟಿದೆ. ಈಗ ಸಿನೆಮಾಗಳಲ್ಲಿ ಬರುವಂತೆ ಹಾಡುಗಳು(ಹಿಂದಿ ಧಾರಾವಾಹಿಗಳಲ್ಲಿ) ಮತ್ತು ಹೊಡೆದಾಟಗಳು ಕಾಣತೊಡಗಿವೆ. ಇನ್ನು ಏನಾದರೂ ನಡೆದರೆ ಕೆಟ್ಟ ಶಬ್ಧದಿಂದ ಆ ಪಾತ್ರಧಾರಿಗಳನ್ನು ಎಲ್ಲಾ ಕೋನದಿಂದಲೂ ತೋರಿಸೋದ್ರಲ್ಲಿ ಧಾರಾವಾಹಿ ಮುಗಿದಿರುತ್ತದೆ.
ಇನ್ನು ನಮ್ಮವರು ಸಿನೆಮಾದಂತೆ ಧಾರಾವಾಹಿಗಳನ್ನು ನಕಲು ಮಾಡುವುದೂ ಇದ್ದಕ್ಕಿದ್ದಂತೆ ಶುರುವಾಗಿದೆ. ಉದಾ: ತಮಿಳಿನ ಕೋಲಂಗಳ್-ಕನ್ನಡದ ರಂಗೋಲಿ, ತಮಿಳಿನ ಸ್ವರ್ಗಂ-ಕನ್ನಡದ ಸಂಸಾರ, ತಮಿಳಿನ ಮಾಂಗಲ್ಯಂ-ಕನ್ನಡದ ಮಾಂಗಲ್ಯ ಇತ್ಯಾದಿ ಇತ್ಯಾದಿ.
'ನಮಗೂ ಉದಯ ಟೀವಿ ಬರ್ತಾ ಇದೆ ಅದು ಬಂದ ಮೇಲೆ ನನಗೆ ಒಳ್ಳೇ time-pass' ಅಂತ ಖುಷಿಯಿಂದ ಹೇಳಿದ ನನ್ನ ಗೆಳತಿಗೆ ಹೊಸದರಲ್ಲಿ ಹಾಗೇ ಆಮೇಲೆ ಗೊತ್ತಾಗತ್ತೆ ಅಂದುಕೊಂಡೆ. ಬೆಳಿಗ್ಗೆ ಒಂದು ಸಿನೆಮಾ ಹಾಕಿದರಾಯ್ತು ಮತ್ತೆ ಮಧ್ಯಾನ್ಹದಿಂದಾ ರಾತ್ರಿ ಮಲಗುವವರೆಗೂ ಧಾರಾವಾಹಿಗಳ ಧಾರಾಕಾರ.
ಈಗ ನನಗೆ ಉದಯ ಟೀವಿ ನೋಡಲು ಸಿಗುತ್ತಿಲ್ಲ. ಹಿಂದಿ ಧಾರಾವಾಹಿಗಳು Z TV ಮತ್ತು SONY ಇಂದ ನೋಡಲು ಸಿಗುತ್ತಿದೆ. ಅವುಗಳಂತೂ ಇಲ್ಲಿಯದಿಕ್ಕಿಂತಾ ಅಧ್ವಾನ. ಒಬ್ಬ ವ್ಯಕ್ತಿ (ಗಂಡು ಅಥವಾ ಹೆಣ್ಣು) ನಾಲ್ಕಕ್ಕಿಂತ ಹೆಚ್ಚು ಅನೈತಿಕ ಸಂಬಂಧವನ್ನು ಹೊಂದಿರುತ್ತಾರೆ. ಅದರಲ್ಲಿ 'ಸಿಂಧೂರ್ ತೇರೆ ನಾಮ್ ಕೆ', 'ಕಸಂ ಸೆ', 'ಮಮತಾ', ಮತ್ತು 'ಸಾತ್ ಫೇರೇ' ಈ ದಾರಾವಾಹಿಗಳಲ್ಲಿ ಕೂಡ ವಿವಾಹೇತರ ಸಂಬಂಧಗಳು ಅನ್ನುವ ಹೊಲಸಲ್ಲಿ ಹೊರಳಾಡಿಸಿದ್ದಾರೆ.
ಇಂಥಹ ಅಸಂಭದ್ದ ಕತೆಗಳನ್ನು ಹೆಣೆದು, ಅನೈತಿಕತೆ ಇಂದಿನ ಜೀವನದಲ್ಲಿ ಸಾಮಾನ್ಯ, ದ್ವೇಷ, ಅಸೂಯೆ ಮತ್ತು ಹೊಟ್ಟೆಕಿಚ್ಚಿನಿಂದ ಸಂಸಾರವನ್ನು ಹೇಗೆ ಹಾಳುಮಾಡಬಹುದು ಎಂದು ಜನಗಳಿಗೆ ಪಾಠ ಹೇಳುತ್ತಿರುವ ಈ ಕಿರುತೆರೆ ಮಾಧ್ಯಮಗಳಿಗೆ ಕಡಿವಾಣ ಹಾಕುವವರು ಯಾರು? ಇದೇ ಮುಂದುವರೆದರೆ ನಮ್ಮ ಮುಂದಿನ ಜನಾಂಗ ಎಲ್ಲಿ ಹೋಗಿ ಮುಟ್ಟುತ್ತದೆ ? ಇಷ್ಟೆಲ್ಲಾ ಬೈದಾಡಿದರೂ ದಿನ ಬೆಳಗಾದರೆ ಇದಕ್ಕಾಗಿ ಟೀ.ವಿ ಮುಂದೆ ಕೂರುವ ನಮ್ಮಂತಹವರು ಎಲ್ಲಿಯವರೆಗೆ ಇವರುಗಳಿಗೆ ಶಾಪ ಹಾಕುವುದು?.
ಇಷ್ಟೆಲ್ಲಾ ಮಧ್ಯದಲ್ಲಿಯೂ ಹಿಂದಿ ನಟಿಯಾದ 'ಅರುಣಾ ಇರಾನಿ' ಅವರು ಕೆಲವು ಒಳ್ಳೇ ಧಾರಾವಾಹಿಗಳನ್ನು ಮಾಡಿದ್ದಾರೆ ಅದರಲ್ಲಿ ನನಗೆ ಇಷ್ಟವಾದದ್ದು 'ತುಂ ಬಿನ್ ಜಾವೂ ಕಹಾ' (ಪುನರ್ಜನ್ಮ ಕುರಿತಾದ ಕತೆ), 'ಮೆಹೆಂದಿ ತೆರೆ ನಾಮ್ ಕೀ' (ಇದರಲ್ಲಿ ಐದು ಜನ ಹೆಣ್ಣು ಮಕ್ಕಳನ್ನು ಪಡೆದ ತಾಯಿ ತನ್ನ ಒಂದೊಂದು ಮಕ್ಕಳನ್ನು ದಡ ಸೇರಿಸುವುದು ಮತ್ತು ಮಕ್ಕಳು ತಾಯಿಯ ಕಷ್ಟ ಅರಿತು ಜೀವನದ ದಾರಿಯನ್ನು ಆರಿಸಿಕೊಳ್ಳುವ ಕತೆ) ಇನ್ನು ತೀರಾ ಇತ್ತೀಚೆಗೆ ಬಂದ 'ವೈದೇಹಿ- ಔರ್ ಏಕ್ ಅಗ್ನಿಪರೀಕ್ಷಾ', (ನಪುಂಸಕ ಗಂಡೊಂದಿಗೆ ಮದುವೆಯಾಗಿ ಅವನಿಂದ ಬಿಡಿಸಿಕೊಳ್ಳಲು ಹೆಣಗುವ ಕತೆ) ಈ ಎಲ್ಲಾ ಕತೆಗಳಲ್ಲೂ ಸ್ವಯಂ ಅರುಣಾ ಅವರು ಸ್ವತ: ಅಭಿನಯಿಸಿ ಅಮೋಘವಾದ ಕತೆಗಳಿಂದ ಒಳ್ಳೊಳ್ಳೇ ಧಾರಾವಾಹಿಗಳನ್ನೂ ತೆಗೆಯಬಹುದು ಅನೋದನ್ನು ತೋರಿಸಿಕೊಟ್ಟಿದ್ದಾರೆ. ಇವುಗಳಂತೂ ಕೇವಲ 13 ರಿಂದ 16 ಕಂತುಗಳಲ್ಲಿ ಪ್ರಸಾರವಾಗಿವೆ ಅಂದರೆ ಆಶ್ಚರ್ಯವಾಗುತ್ತದೆ. ಇಂಥಹ ಧಾರಾವಾಹಿಗಳಿಗೆ ಹೃತ್ಫೂರ್ವಕ ಸ್ವಾಗತ.
Labels: ಧಾರಾ(ಕಾರ)ವಾಹಿಗಳು
'ವಾಲೆಂಟೈನ್ಸ್ ಡೇ' ಹಿಂದಿರುವ ಚರಿತ್ರೆ.
ಹಿಂದೆ ರೋಮ್ ನಲ್ಲಿ ಕ್ಲಾಡಿಯಸ್ ಎಂಬ ರಾಜನು ತನ್ನ ಪ್ರಜೆಗಳನ್ನು ಯುದ್ದಕ್ಕೆ ಸೇರುವಂತೆ ಪೀಡಿಸುತ್ತಿದ್ದನಂತೆ ಆದರೆ ಇವನ ಈ ಹುಚ್ಚಿನಿಂದ ಬೇಸತ್ತ ಜನ ತಲೆಮರೆಸಿಕೊಳ್ಳುತ್ತಿದ್ದರಂತೆ. ಇದರಿಂದ ಕೋಪಗೊಂಡ ರಾಜ ಅವರುಗಳು ಮದುವೆಯಾಗದಂತೆ ತಡೆಯೊಡ್ಡಿದ್ದನು.
ಅದೇ ಸಂದರ್ಭದಲ್ಲಿ ವಾಲೆಂಟೈನ್ ಎಂಬುವನೊಬ್ಬನು ಈ ಪ್ರೇಮಿಗಳನ್ನು ಒಂದುಗೂಡಿಸಲು ಗುಪ್ತ ಮದುವೆಗಳನ್ನು ಮಾಡಿಸುತ್ತಿದ್ದ. ಇದನ್ನು ತಿಳಿದ ರಾಜನು ಆ 'ವಾಲೆಂಟೈನ್' ನನ್ನು ಆಜೀವ ಪರ್ಯಂತ ಸೆರೆಯಲ್ಲಿಟ್ಟನು. ಆಗ ಅವನ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು, ಅವಳು ದಿನಾ ಬಂದು ಇವನನ್ನ ಭೇಟಿಯಾಗುತ್ತಿದ್ದಳು.
ಪೆಬ್ರವರಿ 14 ರಂದು ಅವನು ಕೊನೆಯುಸಿರೆಳೆದನು, ಸಾಯುವ ಮುನ್ನ ಅವಳಿಗೆ ಒಂದು ಪ್ರೇಮ ಪತ್ರವನ್ನು ಬರೆದು ಅದರ ಕೊನೆಯಲ್ಲಿ love from your Valentine ಅಂತ ಬರೆದಿದ್ದನಂತೆ.
ಅದರಂತೆ ಜನ ಆ ದಿನವನ್ನ 'ವಾಲೆಂಟೈನ್ ಡೇ' ಅಥವಾ 'ಪ್ರೇಮಿಗಳ ದಿನಾಚರಣೆ' ಎಂದು ಆಚರಣೆಗೆ ತಂದರು ಅನ್ನೋದು ಕಥೆ.
{ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದುತ್ತಿದ್ದೆ. ಅಮೇರಿಕದಲ್ಲಿ ಪ್ರೇಮಿಗಳ ದಿನಾಚರಣೆ ಯನ್ನು ಪ್ರೇಮಿಯ ಜೊತೆ ಆಚರಿಸುವುದಿಲ್ಲ ಆ ದಿವಸ ಮನೆಯವರೊಂದಿಗೆ ಕಳೆಯುತ್ತೇವೆ ಅಂತ ಹೇಳಿದ್ದಾರೆ. ಪ್ರೇಮಕ್ಕೆ ಇಂಥಾ ಮುಕ್ತವಾತಾವರಣ ಇದ್ದೂ ಇವರುಗಳಿಗೆ ಈ ಆಚರಣೆ ಬೇಸರ ತಂದಿದೆಯೇ? ತಿಳಿಯದಾಗಿದೆ}. ಇಂಥಾ ಒಂದು ಆಚರಣೆ ಇದೆ ಎಂದು ನನಗೆ ತಿಳಿದದ್ದೇ ಈ ಅಮೇರಿಕಾ ದೇಶಕ್ಕೆ ಬಂದ ಮೇಲೆ. ಈಗಂತೂ ಭಾರತದಲ್ಲಿ ಇದು ಬಹಳೇ ಹಳೇ ಆಚರಣೆ ಅನ್ನುವಂತಾಗಿದೆ.
ಒಟ್ಟಿನಲ್ಲ್ಲಿ ಇಡೀ ಪ್ರಪಂಚವೇ ಪ್ರೇಮಿಗಳ ಆಚರಣೆಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸುತ್ತಿದೆ.
ಪ್ರೇಮವೆಂದರೆ ದೇವರು, ಪ್ರೇಮವೊಂದು ಅಗೋಚರವಾದ ಶಕ್ತಿ, ಪ್ರೇಮ ದೈವೀಕವಾದದ್ದು ಇದು ನನ್ನ ಒಂದು ಭಾವನೆ. ಅದೇನೇ ಇರಲಿ ಈ ಪ್ರೇಮಿಗಳ ದಿನಾಚರಣೆಗೆ ನನ್ನದೊಂದು ಕಾಣಿಕೆ....
ಚಿತ್ರ: ಗೆಜ್ಜೆಪೂಜೆ (1970)
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಿಜಯನಾರಸಿಂಹ
ಗಾಯಕರು: ಪಿ.ಬಿ.ಶ್ರೀನಿವಾಸ್ , ಎಸ್.ಜಾನಕಿ.
ಪಂಚಮವೇದಾ ಪ್ರೇಮದನಾದಾ
ಪ್ರಣಯದ ಸರಿಗಮ ಭಾವಾನಂದಾ
ಹೃದಯ ಸಂಗಮ ಅನುರಾಗ ಬಂಧಾ
ರಾಗರಾಗಿಣಿ ಯೋಗಾನು ಬಂಧಾ ...ಪಂಚಮ ವೇದಾ....
ಜೀವಜೀವದ ಸ್ವರಸಂಚಾರಾ
ಅಮೃತ ಚೇತನ ರಸಧಾರಾ
ರಾಧಾಮಾಧವ ವೇಣುವಿಹಾರಾ
ಪ್ರೀತಿಯೆ ಗೀತೆಯ ಜೀವನಸಾರಾ ...ಪಂಚಮವೇದಾ..
ಪ್ರೇಮಗಾನದಿ ಪರವಶವೀಧರೆ
ಮಾನಸಲೋಕದ ಗಂಗೆಯಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ ಬಾಳಿನಾಸರೆ ...ಪಂಚಮವೇದಾ...
*** *** ***